
4th November 2024
ಬೆಳಗಾವಿ: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂಪಾಯಿ ಸಿಗುತ್ತಿದ್ದು, ಹಲವು ಮಹಿಳೆಯರು ಆ ಹಣವನ್ನು ಕೂಡಿಟ್ಟು ಫ್ರಿಡ್ಜ್, ಮೊಬೈಲ್, ಟಿವಿ ಇತ್ಯಾದಿ ಖರೀದಿಸುತ್ತಿದ್ದಾರೆ.
ಇದೀಗ ಯೋಜನೆಯ ಹಣದಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕುಕಡೊಳ್ಳಿ ಗ್ರಾಮದ ತಾಯವ್ವ ಲಕಮೋಜಿ ಎಂಬ ಮಹಿಳೆಯು ಕೂಡಿಟ್ಟು ಯೋಜನೆಯ ಹಣವನ್ನು ಉಪಯೋಗಿಸಿ ಮಿರ್ಚಿ ಮಿಕ್ಸರ್ ಮಷಿನ್ ಖರೀದಿಸಿದ್ದಾರೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, 'ಗೃಹಲಕ್ಷ್ಮಿ' ಯೋಜನೆ ಲಕ್ಷಾಂತರ ಬಡ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆಗೊಳಿಸಿದೆ. ಸಾಕಷ್ಟು ಬಡ ಕುಟುಂಬಗಳು ಗೃಹಲಕ್ಷ್ಮಿ ಯೋಜನೆಯ ಮೂಲಕ ಬದುಕು ಕಟ್ಟಿಕೊಂಡಿರುವುದು ಖುಷಿ ನೀಡಿದೆ ಎಂದರು. ಇನ್ನು ಫಲಾನುಭವಿ ತಾಯವ್ವ ಅವರ ಮನೆಗೆ ಭೇಟಿ ನೀಡಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಿರ್ಚಿ ಮಿಕ್ಸರ್ ಮಷಿನ್ ಅನ್ನು ಉದ್ಘಾಟಿಸಿ, ಮಹಿಳೆಯ ನೂತನ ಉದ್ಯೋಗಕ್ಕೆ ಶುಭ ಕೋರಿದರು.
4th November 2024
ಗೋಕಾಕ್ : ದೀಪಾವಳಿ ಬಲಿ ಪಾಡ್ಯಮಿ ನಿಮಿತ್ತ ಅರಭಾವಿ ಶಾಸಕ ಮತ್ತು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉತ್ತರ ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಸವದತ್ತಿ ಯಲ್ಲಮ್ಮಗುಡ್ಡಕ್ಕೆ ತೆರಳಿ ಶ್ರೀ ಕ್ಷೇತ್ರದ ವಿಶೇಷ ದರ್ಶನ ಪಡೆದರು. ಶನಿವಾರದಂದು ಸಂಜೆ ಶ್ರೀ ಕ್ಷೇತ್ರ ಜೋಗುಳ ಭಾವಿ ಮತ್ತು ಯಲ್ಲಮ್ಮದೇವಿ ದೇವಸ್ಥಾನಕ್ಕೆ ತೆರಳಿ ನಾಡಿನ ಸಕಲ ಜನತೆಯ ಸುಖ, ಶಾಂತಿ, ಆರೋಗ್ಯ, ಸಮೃದ್ಧಿಗಾಗಿ ಅವರು ವಿಶೇಷವಾದ ಪ್ರಾರ್ಥನೆ ಮಾಡಿದರು.
ಮೊದಲು ಜೋಗುಳ ಭಾವಿಗೆ ತೆರಳಿದ ಶಾಸಕರು ಅಲ್ಲಿ ಎಣ್ಣೆ ಹೊಂಡದಲ್ಲಿ ನಮಸ್ಕರಿಸಿ ದೇವರ ದರ್ಶನ ಪಡೆದುಕೊಂಡರು.
ನಂತರ ಸುಪ್ರಸಿದ್ಧ ಸವದತ್ತಿ ಯಲ್ಲಮ್ಮ (ರೇಣುಕಾ) ದೇವಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆಯನ್ನು ನೆರವೇರಿಸಿದರು.
ರೇಣುಕಾ ಯಲ್ಲಮ್ಮ ದೇವಿಗೆ ಉಡಿ ತುಂಬುವ ಕಾರ್ಯಕ್ರಮದ ನಂತರ ಸಂಪ್ರದಾಯದಂತೆ ದೇವಸ್ಥಾನದ ಶಿಖರ ಮೇಲೆ ಕುಂಕುಮ- ಭಂಡಾರದ ಸಿಂಚನ ಅರ್ಪಣೆ ಮಾಡಿದರು. ವಿಶೇಷವಾದ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ತಮ್ಮ ಮನೆತನದವರು ಪ್ರತಿ ವರ್ಷವೂ ದೀಪಾವಳಿ ಬಲಿ ಪಾಡ್ಯಮಿ ದಿನದಂದು ಶ್ರೀ ಕ್ಷೇತ್ರ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಈ ಸಂಪ್ರದಾಯವೂ ತಮ್ಮ ತಾಯಿ- ತಂದೆಯವರ ಕಾಲದಿಂದಲೂ ಬಂದಿದ್ದು, ಇದನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ.
ಈ ದೀಪಾವಳಿ ಹಬ್ಬ ನಾಡಿನ ಎಲ್ಲ ಜನರು ಮತ್ತು ರೈತರಿಗೆ ಸುಖವನ್ನು ನೀಡಲಿ. ಅವರ ಬಾಳಿನಲ್ಲಿ ಸಂಭ್ರಮದ ವಾತಾವರಣ ಸದಾ ನಿರ್ಮಾಣವಾಗಲಿ. ಇಡೀ ಭಕ್ತರ ಮೇಲೆ ತಾಯಿ ಯಲ್ಲಮ್ಮದೇವಿ ಆಶೀರ್ವಾದ ಮಾಡಿ ಹರಿಸಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಆಶಿಸಿದರು.
ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಪಿ.ಎಂ. ಮಹೇಶ ಮತ್ತು ಅರ್ಚಕ ಏಕನಗೌಡ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ನಿವೃತ್ತ ಅಧಿಕಾರಿ ರವಿ ಕೋಟಾರಗಸ್ತಿ, ಅಭಿವೃದ್ಧಿ ಪ್ರಾಧಿಕಾರದ ಉಪ- ಕಾರ್ಯದರ್ಶಿ ನಾಗರತ್ನ ಚೋಳಿನ, ಮೇಲ್ವಿಚಾರಕ ಅಲ್ಲಂ ಪ್ರಭು, ಪ್ರಾಧಿಕಾರದ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.**
18th October 2024
ಬೆಳಗಾವಿ ವಿಧಾನಮಂಡಳ ಚಳಿಗಾಲ ಅಧಿವೇಶನ: ಪೂರ್ವ ಸಿದ್ಧತೆ ಪರಿಶೀಲನಾ ಸಭೆ
-----------------------------------------
ಅಧಿವೇಶನ-ಅಗತ್ಯ ಸಿದ್ಧತೆಗೆ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಸೂಚನೆಬೆಳಗಾವಿ ವಿಧಾನಮಂಡಳ ಚಳಿಗಾಲ ಅಧಿವೇಶನ: ಪೂರ್ವ ಸಿದ್ಧತೆ ಪರಿಶೀಲನಾ ಸಭೆ
-----------------------------------------
ಅಧಿವೇಶನ-ಅಗತ್ಯ ಸಿದ್ಧತೆಗೆ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಸೂಚನೆ
ಬೆಳಗಾವಿ, ಅ.18: ಪ್ರಸಕ್ತ ಸಾಲಿನ ಡಿಸೆಂಬರ್ ನಲ್ಲಿ ಬೆಳಗಾವಿಯಲ್ಲಿ ಜರುಗಲಿರುವ ವಿಧಾನಮಂಡಳದ ಚಳಿಗಾಲ ಅಧೀವೇಶನವನ್ನು ಕಳೆದ ಬಾರಿಯಂತೆ ಯಾವುದೇ ದೂರುಗಳಿಗೆ ಆಸ್ಪದ ನೀಡದೆ ಅಚ್ಚುಕಟ್ಟಾಗಿ ಆಯೋಜಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಕರ್ನಾಟಕ ವಿಧಾನ ಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ ಫರೀದ್ ಅವರು ಸೂಚನೆ ನೀಡಿದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ(ಅ.18) ನಡೆದ ಬೆಳಗಾವಿ ಚಳಿಗಾಲ ಅಧಿವೇಶನದ ಕುರಿತ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಧಿವೇಶನಕ್ಕೆ ಆಗಮಿಸುವ ಮುಖ್ಯಮಂತ್ರಿ, ಸಚಿವರು, ಶಾಸಕರುಗಳಿಗೆ ಯಾವುದೇ ರೀತಿಯ ಅನಾನೂಕುಲವಾಗದಂತೆ ನಿಗಾವಹಿಸಬೇಕು. ಅಧಿವೇಶನಕ್ಕೆ ಬರುವಂತಹ ಸಚಿವರು, ಶಾಸಕರು, ಸಚಿವಲಾಯದ ಅಧಿಕಾರಿ, ಸಿಬ್ಬಂದಿಗಳು, ಚಾಲಕರಿಗೆ ಹಾಗೂ ಪೋಲಿಸ್ ಅಧಿಕಾರಿ ಸಿಬ್ಬಂದಿಗಳಿಗೆ ವ್ಯವಸ್ಥಿತ ವಸತಿ, ಊಟೊಪಹಾರದ ವ್ಯವಸ್ಥೆಯಾಗಬೇಕು ಎಂದರು.
ಸುವರ್ಣ ಸೌಧದ ಪ್ರವೇಶದ್ವಾರದಲ್ಲಿ ಜನ ಹಾಗೂ ಸಂಚಾರ ದಟ್ಟಣೆ ಆಗದಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ಪ್ರತಿಭಟನಾ ಸ್ಥಳ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸಿ ನಿರಂತರವಾಗಿ ನಿಗಾವಹಿಸಲು ತಿಳಿಸಿದರು.
ಅಧಿವೇಶನದ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ಸುವರ್ಣ ಸೌಧದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಲಾಪಗಳ ವೀಕ್ಷಣೆಗೆ ಆಗಮಿಸುವ ಶಾಲೆಗಳ ವಿವರಗಳನ್ನು ಮುಂಚಿತವಾಗಿ ನೀಡಬೇಕು. ಕಾಯುವಿಕೆ ಸಮಯದಲ್ಲಿ ಮಕ್ಕಳಿಗೆ ನೆರಳಿನ ವ್ಯವಸ್ಥೆ ಮಾಡಬೇಕು.
ಕಳೆದ ಬಾರಿಯ ಅಧಿವೇಶನದಂತೆ ಈ ಬಾರಿಯ ಚಳಿಗಾಲದ ಅಧಿವೇಶನವನ್ನು ಅಚ್ಚುಕಟ್ಟಾಗಿ ಜರುಗಿಸಬೇಕು. ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವುದರ ಮೂಲಕ ಚಳಿಗಾಲದ ಅಧಿವೇಶನವನ್ನು ಯಶಸ್ವಿಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ತಿಳಿಸಿದರು.
ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಕಳೆದ ಬಾರಿಯಂತೆ ಈ ಬಾರಿಯು ಪ್ರತಿದಿನ ಬೇರೆ ಬೇರೆ ಜಿಲ್ಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ಕಾರ್ಯಕ್ರಮಗಳಿಗೆ ಅಕ್ಕಪಕ್ಕದ ಜಿಲ್ಲೆಗಳ ಕಲಾವಿದರಿಗೆ ಆದ್ಯತೆ ನೀಡಬೇಕು ಎಂದರು.
ಅಧಿವೇಶನದ ಸಂದರ್ಭದಲ್ಲಿ ಅಂತರ್ಜಾಲ ವ್ಯವಸ್ಥೆಯಲ್ಲಿ ಯಾವುದೇ ಅಡತಡೆ ಆಗದಂತೆ ನೋಡಿಕೊಳ್ಳಲು ಸೂಚಿಸಿದರು. ಶಾಸಕರು, ಸಚಿವರುಗಳು ವಾಸ್ತವ್ಯ ಮಾಡುವಂತಹ ಹೊಟೆಲಗಳಲ್ಲಿ ಸಾರ್ವಜನಿಕರ ಭೇಟಿಗೆ ಲಾಂಜ್ ವ್ಯವಸ್ಥೆ ಮಾಡಬೇಕು. ಈ ಕುರಿತು ಹೋಟೆಲ್ ಮಾಲಿಕರೊಂದಿಗೆ ಸಭೆ ಜರುಗಿಸಿ ಸೂಕ್ತ ನಿರ್ದೆಶನಗಳನ್ನು ನೀಡಲು ತಿಳಿಸಿದರು.
ಸುವರ್ಣ ಸೌಧದಲ್ಲಿ ಶಾಸಕರ ಭವನ ನಿರ್ಮಾಣ ಹಾಗೂ ನಿರಂತರ ನೀರು ಪೂರೈಕೆಗೆ ಸಂಬಂಧಿಸಿದಂತೆ ಯೋಜನೆಯನ್ನು ರೂಪಿಸಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಾತನಾಡಿ, ಅಧಿವೇಶನವನ್ನು ವ್ಯವಸ್ಥಿತವಾಗಿ ಜರುಗಿಸುವ ಹಿನ್ನೆಲೆಯಲ್ಲಿ ವಸತಿ, ಆಹಾರ ಹಾಗೂ ಭದ್ರತಾ ಸಮಿತಿಗಳನ್ನು ರಚಿಸಿ ಸಭೆಗಳನ್ನು ಆಯೋಜಿಸಲಾಗಿದೆ. ಅಧಿವೇಶನಕ್ಕೆ ಆಗಮಿಸುವ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಸಚಿವಾಲಯದ ಅಧಿಕಾರಿ, ಸಿಬ್ಬಂದಿ, ವಾಹನ ಚಾಲಕರಿಗೆ ಸೂಕ್ತ ವಸತಿ ಹಾಗೂ ಊಟೋಪಹಾರದ ಕಲ್ಪಿಸಲು ಸಭೆಯಲ್ಲಿ ಚರ್ಚಿಸಲಾಗಿರುತ್ತದೆ. ಅಲ್ಲದೇ ಭದ್ರತೆಗೆ ಸಂಬಂಧಿಸಿದಂತೆ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಸುವರ್ಣ ಸೌಧದಲ್ಲಿ ಸಚಿವರು, ಶಾಸಕರು, ಸಚಿವಾಲಯದ ಅಧಿಕಾರಿ, ಸಿಬ್ಬಂದಿ, ವಾಹನ ಚಾಲಕರಿಗೆ ಹಾಗೂ ಪೋಲಿಸ್ ಸಿಬ್ಬಂದಿಗಳಿಗೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಲಾಗುವದು. ಅಲ್ಲದೇ ಸುಮಾರು ನಾಲ್ಕು ಖಾಸಗಿ ಕ್ಯಾಂಟಿನ್ ಗಳನ್ನು ತೆರೆಯಲಾಗುವುದು.
ಡಿ.ಸಿ.ಪಿ.ರೋಹನ ಜಗದೀಶ ಕಳೆದ ಅಧಿವೇಶನಕ್ಕೆ ಅಂದಾಜು ಐದು ಸಾವಿರ ಪೋಲಿಸ್ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಅಚ್ವುಕಟ್ಟಾದ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಭಟನಾ ಸ್ಥಳಗಳಲ್ಲಿ ಅಗತ್ಯ ಪೋಲಿಸ್ ಬಂದೋಬಸ್ತ ಜೊತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಸಭೆಯಲ್ಲಿ ಶಾಸಕರಾದ ರಾಜು(ಆಸೀಫ್)ಸೇಠ ಕರ್ನಾಟಕ ವಿಧಾನ ಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ವಿಧಾನ ಪರಿಷತ್ ಕಾರ್ಯದರ್ಶಿಗಳಾದ ಮಹಾಲಕ್ಷ್ಮೀ, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ,
ಜಿಲ್ಲಾ ಪಂಚಾಯತ ಸಿ.ಇ.ಓ. ರಾಹುಲ್ ಶಿಂಧೆ,
ಪ್ರಶಿಕ್ಷಣಾರ್ಥಿ ಆಯ್.ಎಸ್. ಅಧಿಕಾರಿ ದಿನೇಶಕುಮಾರ್ ಮೀನಾ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸುವರ್ಣಸೌಧ ಪರಿಶೀಲನೆ; ಸಮರ್ಪಕ ನಿರ್ವಹಣೆಗೆ ನಿರ್ದೇಶನ:
ಸಭೆಗೂ ಮುಂಚೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸುವರ್ಣಸೌಧದ ವಿವಿಧ ಸಭಾಂಗಣಗಳನ್ನು ವೀಕ್ಷಿಸಿದರು
ಇದೇ ಸ್ವಚ್ಛತಾ ಸಿಬ್ಬಂದಿಗಳನ್ನು ಮಾತನಾಡಿಸಿದ ಯು.ಟಿ.ಖಾದರ್ ಅವರು, ದೈನಂದಿನ ಸ್ವಚ್ಛತಾ ಕೆಲಸದ ಕುರಿತು ಮಾಹಿತಿ ಪಡೆದುಕೊಂಡರು.
ತದನಂತರ ವಿಧಾನ ಸಭೆ, ವಿಧಾನ ಪರಿಷತ್ ಸಭಾಂಗಣಗಳಿಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಸ್ವಚ್ಛತೆ, ಆಸನಗಳ ನಿರ್ವಹಣೆ, ಪ್ರವೇಶ ದ್ವಾರದ ಬ್ಯಾಗೇಜ್ ಸ್ಕ್ಯಾನರ್ ಮತ್ತಿತರ ವ್ಯವಸ್ಥೆಗಳನ್ನು ಮುಂಚಿತವಾಗಿ ಸಿದ್ಧವಾಗಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
***