
ಭೂಮಿ ಸಂಸ್ಥೆಯಿಂದ ರಾಜ್ಯದ ೩೦೦ ರೈತರಿಗೆ ಪ್ರಶಸ್ತಿ ಪ್ರದಾನ
22nd November 2024
ಬೆಳಗಾವಿ-೨೨: ಬೆಳಗಾವಿಯ ಚೆನ್ನಮ್ಮ ವೃತ್ತದ ಬಳಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ದಿನಾಂಕ ೨೨ ಶುಕ್ರವಾರದಂದು ಭೂಮಿ ಡಿಜಿಟಲ್ ಅಗ್ರಿ ಪ್ಲಾಟಫಾರ್ಮದವರು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ ಟಿ. ಎನ್. ಅವರು ಮಾತನಾಡಿದರು. ಕಳೆದ ಹತ್ತು ವರ್ಷಗಳಿಂದ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಹಾಗೂ ರೈತರ ಬೆಳೆಗಳಿಗೆ ಉತ್ತಮ ಆದಾಯ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ, 'ಭೂಮಿ' ಸಂಸ್ಥೆ, ಇದೀಗ ಇನ್ನೊಂದು ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ ಎಂದು ಅವರು ಹೇಳಿದರು. ಭೂಮಿ ಸಂಸ್ಥೆಯು ಡಿಸೆಂಬರ್ ೨೨ ರಂದು ವಿಶ್ವ ರೈತರ ದಿನಾಚರಣೆ ಈ ಸಂದರ್ಭದಲ್ಲಿ ಪ್ರಥಮ ಬಾರಿಗೆ ರಾಜ್ಯದ ೨೫ ಜಿಲ್ಲೆಗಳಿಂದ ಆಯ್ಕೆ ಮಾಡಿ ಮುನ್ನೂರು ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬೆಂಗಳೂರಿನ ಪ್ರೆಸ್ ಕ್ಲಬ್ಆವರಣದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರುವ ರೈತರಿಗೆ ಉಚಿತ ಪ್ರಯಾಣ, ವಸತಿ ಮತ್ತು ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ರಘುನಂದನ್ ಹೇಳಿದರು.
ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಲು 'ಐ ಸಪೂರ್ಟ ಫಾರ್ಮರ್' ಎಂಬ ವಿನೂತನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ರೈತರಿಗೆ ಆನ್ಸೆಂÊನ್ ಮೂಲಕ ಪ್ರೋತ್ಸಾಹ ಧನ ನೀಡಲಾಗುವುದು ಹಾಗೂ ಇದಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಲಾಗಿದೆ. ಇದರ ಮೂಲಕ ಸಣ್ಣ ಮತ್ತು ಅತಿಸಣ್ಣ ರೈತು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಪ್ರಾರಂಭಿಸಲಾಗಿದೆ ಎಂದು ರಘುನಂದನ್ ವಿವರಿಸಿದರು.ರೈತರಿಗೆ ಮಾರ್ಗದರ್ಶನ, ಉತ್ತಮ ಮಾರುಕಟ್ಟೆ ಹಾಗೂ ಅವರ ಜೀವನ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ 'ಭೂಮಿ' ಸಂಸ್ಥೆ ಸೇವೆ ಸಲ್ಲಿಸುತ್ತಿದೆ ಎಂದು ಅವರು ಹೇಳಿದರು.
'ಭೂಮಿ' ಸಂಸ್ಥೆಯ ಮಾಧ್ಯಮ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ಹನುಮೇಶ್ ಕೆ ಯಾವಗಲ್ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಉದ್ಯೋಗ ಅವಕಾಶಗಳಿದ್ದು, ಈ ಕ್ಷೇತ್ರದತ್ತ ಯುವ ಜನಾಂಗ ಆಕರ್ಷಿಸುವ ಉದ್ದೇಶದಿಂದ 'ಭೂಮಿ' ಸಂಸ್ಥೆ ಸೇವೆ ಸಲ್ಲಿಸುತ್ತಿದೆ. ದೇಶ ಕಾಯುವ ಯೋಧನಿಗೆ ಸಿಗುವ ಗೌರವ ಪ್ರಾಶಸ್ತದಷ್ಟೇ ದೇಶಕ್ಕೆ ಅನ್ನ ನೀಡುವ ರೈತನಿಗೂ ಎನ್ನುವುದ ನಮ್ಮ ಸಂಸ್ಥೆಯ ಉದ್ದೇಶವಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು. – ಪತ್ರಿಕಾ ಗೋಷ್ಠಿಯಲ್ಲಿ ಭೂಮಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ ಟಿ. ಎನ್. ಮತ್ತು ಹಿರಿಯ ಪತ್ರಕರ್ತ ಹನುಮೇಶ್ ಕೆ ಯಾವಗಲ್ ಹಾಜರಿದ್ದರು.