
ವೀರಶೈವ ಮಠಗಳು ಧರ್ಮವನ್ನು ಉಳಿಸುವ ಕೆಲಸವನ್ನು ಮಾಡುತ್ತಿವೆ: ಸಂಸದ ಜಗದೀಶ್ ಶೆಟ್ಟರ್
29th October 2024

ತುಂಗಾಕಿರಣ ಸುದ್ದಿ
ಕುಷ್ಟಗಿ: ನಾಡಿನಾದ್ಯಂತ ಇರುವ ವೀರಶೈವ ಮಠಗಳು ಧರ್ಮ ಜಾಗೃತಿಯನ್ನು ಮಾಡುವ ಮೂಲಕ ಧರ್ಮವನ್ನು ಉಳಿಸುವ ಕೆಲಸವನ್ನು ಮಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ್ ಅವರು ಹೇಳಿದರು.
ತಾಲೂಕಿನ ಚಳಗೇರಾ ಗ್ರಾಮದಲ್ಲಿ ಲಿಂ. ವಿರುಪಾಕ್ಷಲಿಂಗ ಶಿವಾಚಾರ್ಯರ ಪುಣ್ಯಸ್ಮರಣೆಯ ದಶಮಾನೋತ್ಸವದ ಅಂಗವಾಗಿ ರಂಭಾಪುರಿ ಶ್ರೀಗಳಾದ ಡಾ. ವೀರಸೋಮೇಶ್ವರ ಶಿವಾಚಾರ್ಯರ ಸಾನಿಧ್ಯದಲ್ಲಿ ಇಂದು ನಡೆದ ಲಿಂಗಾಂಗ ಸಾಮರಸ್ಯ ಧರ್ಮಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕುಷ್ಟಗಿ ತಾಲೂಕಿನಲ್ಲಿರುವ ಚಳಗೇರಾ ಮಠವು ಅನ್ನದಾಸೋಹದ ಜೊತೆಗೆ ಶಿಕ್ಷಣವನ್ನು ನೀಡುವ ಮೂಲಕ ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವದು ಶ್ಲಾಘನೀಯವಾಗಿದೆ ಎಂದರು. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಮಾತಿನಂತೆ ರಂಭಾಪುರಿ ಶ್ರೀಗಳು ನಾಡಿನ ತುಂಬೆಲ್ಲಾ ಪ್ರವಾಸ ಮಾಡಿ ಧರ್ಮ ಜಾಗೃತಿ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ಶಾಂತಿ ನೆಲೆಸಬೇಕು ಎಂಬ ಉದ್ದೇಶದಿಂದ ಅನೇಕ ದೇಶಗಳಿಗೆ ಪ್ರವಾಸವನ್ನು ಮಾಡುವ ಮೂಲಕ ಅಲ್ಲಿಯ ಅಧ್ಯಕ್ಷರನ್ನು ಭೇಟಿ ಮಾಡಿ, ಯುದ್ಧ ಮಾಡುವ ಬದಲಿಗೆ ಶಾಂತಿ ನೆಲೆಸುವ ಕಾರ್ಯವನ್ನು ಮಾಡಬೇಕು ಎಂದು ಹೇಳುವ ಮೂಲಕ ಶಾಂತಿ ನೆಲೆಸುವಂತೆ ಮಾಡುತ್ತಿದಾರೆ ಎಂದು ಹೇಳಿದರು.
ಕೊಪ್ಪಳ ಲೋಕಸಭಾ ಸದಸ್ಯ ರಾಜಶೇಖರ ಹಿಟ್ನಾಳ ಮಾತನಾಡಿ, ಸುಮಾರು ಐದು ಸಾವಿರ ವರ್ಷಗಲಿಂದಲೂ ವೀರಶೈವ ಮಠಗಳು ಸಂಸ್ಕಾರ ಸಂಸ್ಕೃತಿಯನ್ನು ಕಲಿಸುವ ಮೂಲಕ ಶಿಕ್ಷಣ. ವಸತಿ, ಅನ್ನದಾಸೋಹ ಹಾಗೂ ಧರ್ಮ ಜಾಗೃತಿ ಕಾರ್ಯವನ್ನು ಮಾಡುತ್ತಾ ಬಂದಿರುತ್ತವೆ ಇಂತಹ ಮಠ ಮಂದಿರಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಬೆಳೆಸುವ ಕೆಲಸವನ್ನು ಮಾಡಬೇಕು. ಈ ಚಳಗೇರಾ ಮಠವು ವಸತಿ ನಿಲಯದ ಸ್ಥಾಪನೆಗೆ ಹೆಜ್ಜೆ ಇಟ್ಟಿದ್ದು ಶ್ಲಾಘನೀಯ ಕಾರ್ಯವಾಗಿದೆ ಈ ಕಟ್ಟಡ ಕಾರ್ಯಕ್ಕೆ ಅನುದಾನದಲ್ಲಿ ನಾನು ಈ ವರ್ಷ ಹತ್ತು ಲಕ್ಷ ಹಾಗೂ ಮುಂದಿನ ವರ್ಷ ಹತ್ತು ಲಕ್ಷ ನೀಡುತ್ತೇನೆ ಎಂದು ಹೇಳಿದರು.
ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಮಾತನಾಡಿ, ತ್ರಿವಿಧ ದಾಸೋಹ ನೀಡುವಲ್ಲಿ ವೀರಶೈವ ಮಠಗಳು ಬಹಳಷ್ಟು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದರು. ಮಾಜಿ ಶಾಸಕ ಪರಣ್ಣ ಮನವಳ್ಳಿ ಮಾತನಾಡಿ ವೀರಶೈವ ಮಠಗಳು ಮಾಡುವ ಕಾರ್ಯವನ್ನು ಯಾವ ಮಠಗಳು ಮಾಡುತ್ತಿಲ್ಲ. ಮಠ ಮಂದಿರಗಳು ಬೆಳವಣಿಗೆ ಆಗಬೇಕು ಅವುಗಳ ಆಶ್ರಯ ಮತ್ತು ಸಹಕಾರದಲ್ಲಿ ನಾವು ಬೆಳೆಯಬೇಕು ಎಂದರು. ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ ನಮ್ಮ ಭಾರತ ದೇಶವು ತ್ಯಾಗದ ಸಂಕೇತವಾಗಿದ್ದು ಇಲ್ಲಿಯ ಮಠಗಳಲ್ಲಿ ಅನ್ನ ದಾಸೋಹ ಶಿಕ್ಷಣ ದಾಸೋಹ ಇದ್ದು, ಮಕ್ಕಳು ಇಲ್ಲಿ ಶಾಲೆ ಕಲಿತು ಉತ್ತಮ ಜೀವನ ಕಟ್ಟಿಕೊಳ್ಳ ಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ ದೊಡ್ಡನಗೌಡ ಹೆಚ್. ಪಾಟೀಲ, ಮಾಜಿ ಶಾಸಕ ಹಾಗೂ ಕಾಡಾ ಅಧ್ಯಕ್ಷರಾದ ಹಸನಸಾಬ ದೋಟಿಹಾಳ, ಮಾಜಿ ಶಾಸಕ ಕೆ. ಶರಣಪ್ಪ ವಕೀಲರು, ಹಾಗೂ ಎಸ್ ಆರ್ ನವಲಿ ಹಿರೇಮಠ ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ ಪೂಜ್ಯರಾದ ವಿಮಲರೇಣುಕ ಮುಕ್ತಿಮುನಿ, ವೀರಸಂಗಮೇಶ್ವರ ಶಿವಾಚಾರ್ಯರು, ವೀರಭದ್ರಸ್ವಾಮಿಗಳು, ಮಲ್ಲಿಕಾರ್ಜುನ ಸ್ವಾಮಿಗಳು, ವಾಮದೇವ ಸ್ವಾಮಿಗಳು, ಕರಿಬಸವ ಶಿವಾಚಾರ್ಯರು, ಚಂದ್ರಶೇಖರ ದೇವರು, ಶಿವಶಾಂತವೀರ ಸ್ವಾಮಿಗಳು ಸೇರಿದಂತೆ ಭಕ್ತಾಧಿಗಳು ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಚನ್ನಯ್ಯಸ್ವಾಮಿ ನಡೆಯಿಸಿಕೊಟ್ಟರು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದಲ್ಲಿ ಲಿಂ. ವಿರುಪಾಕ್ಷಲಿಂಗ ಶಿವಾಚಾರ್ಯರ ಪುಣ್ಯಸ್ಮರಣೆಯ ದಶಮಾನೋತ್ಸವದ ಅಂಗವಾಗಿ ರಂಭಾಪುರಿ ಶ್ರೀಗಳಾದ ಡಾ. ವೀರಸೋಮೇಶ್ವರ ಶಿವಾಚಾರ್ಯರ ಸಾನಿಧ್ಯದಲ್ಲಿ ನಡೆದ ಸಾಮರಸ್ಯ ಧರ್ಮಸಭೆಯ ಕಾರ್ಯಕ್ರಮ.

ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.

ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.

ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ